ಗುರುವಾರ, ಆಗಸ್ಟ್ 4, 2011

ನಾಡಗೀತೆ - ವೇಷ ಬೇರೆ ಭಾಷೆ ಬೇರೆ

ಕವಿ: ಸಾ ಶಿ ಮರುಳಯ್ಯ

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ,
ಇದೇ ನಮ್ಮ ಭಾರತ, ಪುಣ್ಯ ಭೂಮಿ ಭಾರತ ||ವೇಷ ಬೇರೆ||

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ||ವೇಷ ಬೇರೆ||

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕ್ರುತಿ ||ವೇಷ ಬೇರೆ||

PS: ಇದೂ ಕೂಡ ನಮ್ ಸ್ಕೂಲಲ್ಲಿ ಹೇಳ್ತಾ ಇದ್ದ ಹಾಡು, ಆದ್ರೆ ಇದರ ರಾಗ ಮರೆತು ಹೋಗಿದೆ, ಯಾರಾದ್ರೂ ನೆನಪು ಮಾಡಿ ಕೊಟ್ರೆ ಅವರಿಗೆ ದೊಡ್ಡದೊಂದು ಚಾಕಲೇಟ್ ಕೊಡಿಸ್ತೀನಿ :)

ನಾಡ ಗೀತೆ - ಐದು ಬೆರಳು ಕೂಡಿ ಒಂದು ಮುಷ್ಟಿಯು

ಕವಿ: H S ವೆಂಕಟೇಶ ಮೂರ್ತಿ

ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೄ ಧಾರೆ ತೊಳೆಯಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

PS: ಇದೂ ನಮ್ ಸ್ಕೂಲ್ ಶನಿವಾರದ ನಾಡಗೀತೆ ಲಿಸ್ಟಲ್ಲಿ ಇತ್ತು :)
ashru(ಅಶೄ) ಸರಿಯಾಗಿ ಟೈಪ್ ಮಾಡ್ಲಿಕ್ಕೆ ಆಗದ್ದಕ್ಕೆ ಕ್ಷಮಿಸಬೇಕು.

ಎಲ್ಲಿ ಎಲ್ಲಿ ರಮ್ಯತಾಣ - ಭಾವಗೀತೆ ೧೧

ಕವಿ: ನಿಸಾರ್ ಅಹ್ಮೆದ್

ಎಲ್ಲಿ ಎಲ್ಲಿ ರಮ್ಯತಾಣ ಅಲ್ಲಿ ನಿನಗೆ ವಂದನ
ಎಲ್ಲಿ ಎಲ್ಲಿ ಪುಣ್ಯ ಧಾಮ ಹೂವು ಧವನ ಚಂದನ ||ಎಲ್ಲಿ ಎಲ್ಲಿ||

ತುಂಗೆ ಕೃಷ್ಣೆ ಕಾವೇರಿ ನಿನ್ನ ಪ್ರಾಣ ಸ್ಪಂದನ
ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ
ಪಶ್ಚಿಮಾದ್ರಿ ದರಿತಟಾಕ ಘಟ್ಟನಾಕ ಸದೃಶ
ಬಯಲು ಸೀಮೆ ತೆನೆಸುಭೀಕ್ಷೆ ಕಲ್ಪ ವೃಕ್ಷ ಪರವಶ ||ಎಲ್ಲಿ ಎಲ್ಲಿ||

ಬಸದಿ ಚರ್ಚು ಗುಡಿ ಮಸೀದಿ ಅಗ್ಗಳಿಕೆಯ ಕೇತನ
ಬಾಣವೆನಿತು ಸತ್ಯದೆಡೆಗೆ ಬತ್ತಳಿಕೆ ಸಚೇತನ
ಕಪಾಲಿಕ ಲಕುಲ ಶಕ್ತಿ ನಾಗಪಂಥ ಸರಿಸಮ
ಅಂತೆ ಜಿನ ಫಕೀರ ಸಂತ ಎಲ್ಲರಿಗು ನಮೋನ್ನಮ ||ಎಲ್ಲಿ ಎಲ್ಲಿ||

ಸುಸಂಸ್ಕಾರ ಸಂಪನ್ನಳು ಕನ್ನಡಾಂಬೆ ಧನ್ಯಳು
ವಿವಿಧ ಜನ ಅನನ್ಯೆ ಮಾನ್ಯೆ ಸಚ್ಚಿದಂಶ ಜನ್ಯಳು
ರತ್ನದಂತೆ ಕಂದರಮಿತ ಪ್ರತಿಭಾ ಪ್ರಭೆ ಹಬ್ಬಲಿ
ನುಡಿಪರಾಗ ಅತಿಸರಾಗ ವಿಶ್ವವನ್ನೆ ತಬ್ಬಲಿ,ವಿಶ್ವವನ್ನೆ ತಬ್ಬಲಿ, ವಿಶ್ವವನ್ನೆ ತಬ್ಬಲಿ||ಎಲ್ಲಿ ಎಲ್ಲಿ||

PS: ನಮ್ ಸ್ಕೂಲ್ ಅಲ್ಲಿ ಈ ಹಾಡು ಹಾಡ್ತಾ ಇದ್ವಿ .. :)

ಬುಧವಾರ, ಆಗಸ್ಟ್ 3, 2011

time pass

ಬೇಡವಾಗಿದೆಯೇ ಪ್ರಪಂಚದ ನೆರವು?
ಕಾಣದ ದೂರದ ತೀರವ ಹುಡುಕುವ ಬಯಕೆ ಇಲ್ಲದ್ದರೂ, ನಾವೇಕೆ ಭಿನ್ನರಲಿ ವಿಭಿನ್ನರು??
ಯಾವ ಗೊತ್ತು ಗುರಿ ಇರದ ಏಕಾಂಗಿತನದ ಯಾದಿಯಲಿ ಸುಮ್ಮನೆ ಹೀಗೆ ಬರೆದೆನ ಏನೇನೋ?
ಆಲೋಚನೆಗೆ ಸಿಲುಕದ್ದು , ಭಾವನೆಗೆ ನಿಲುಕದ್ದು ಅಗಾಧ ಮಳೆಯ ಹನಿಗಳಲಿ, ಅಲ್ಲೇ ಕಳೆದು ಹೋಗುವ ಮತ್ತೊಂದು ಬಯಕೆಯಲಿ?

ಸೋಮವಾರ, ಆಗಸ್ಟ್ 1, 2011

ಮೌನ

ಇಂದೇಕೋ ಎಲ್ಲವೂ ಗೌಣ
ಕಣ್ಣಿನ ಮಾತನು ಅರಿವ ಮನವಿದ್ದರೂ ಬೇಡವಾದ ಗಾನ

ಬೇರೆ ನೋವಿಗೆ ಎಡೆ ಮಾಡದೆ ಇರುವ ನಿರ್ಭಾವುಕ ಯಾನದ ಕಾರಣವ ಹುಡುಕ ಹೊರಟರೆ ಎಲ್ಲವೂ ಹಳೆಯವೇ, ಹೊಸದೇನು ಇಲ್ಲವೇ?
ಬೇಸರಕ್ಕೂ ಬೇಸರಿಕೆ ಮೂಡಿಸಿದೆನೆ ನಾನು?

ಅರ್ಥವಿರದ ಕನಸೊಂದು ಕಾಡಿದೆ, ನಾನು ಇಂದಿನವಳಲ್ಲ ಎಂದು ಅದೇ ಸಾರಿದೆ
ಅದೇ ಪಾತ್ರಗಳು ಮರುಕಳಿಸಿವೆ ಇಲ್ಲಿಯೂ, ಬೇರೆ ಹೆಸರಿನಲ್ಲಿ, ಬೇರೆ ಧಾವಿನಲಿ

ಕೂಡುವ ಕಳೆಯುವ ಲೆಕ್ಕ್ಹವೇ ಬೇಡ,
ಮೌನದಾಚೆಯ ಮೌನವ ಬಯಸಿ ನಾನೊಬ್ಬಳೆ ಹೋಗಲಾರೆನೆ ಸಾಗರದ ಅಂಚಿನಲ್ಲಿ ಕೂತು ಅಲೆಗಳ ನೋಡಲು?

ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಮತ್ತೊಂದು ನೋವು ಮೈ ಮನಸ್ಸನ್ನು ತುಂಬುತ್ತೆ
ನಿರರ್ಥಕ ಪ್ರಯತ್ನಗಳ ಮಡುವಿನಲ್ಲಿ ಇನ್ನೂ ನಡೆಯುತ್ತಲೇ ಇದ್ದೇನೆ, ಎನಿತು ಸಿಕ್ಕೀತು ನನಗೆ ಮುಕ್ತಿ?